ಯುಗಾದಿ ವರ್ಷ ಭವಿಷ್ಯ: ಮೇಷದಿಂದ ಮೀನದ ತನಕ ದ್ವಾದಶ ರಾಶಿಗಳ ಶೋಭಕೃತ್ ಸಂವತ್ಸರದ ವರ್ಷ ಫಲ..!
ಯುಗಾದಿಯಲ್ಲಿ ಎರಡು ಪದ್ಧತಿಯನ್ನು ಅನುಸರಿಸಲಾಗುತ್ತದೆ; ಒಂದು ಚಾಂದ್ರಮಾನ, ಇನ್ನೊಂದು ಸೌರಮಾನ. ಚಾಂದ್ರಮಾನ ಯುಗಾದಿ ಮಾರ್ಚ್ 22, 2023ರಂದು ಇದೆ. ಇದರೊಂದಿಗೆ ಶೋಭಕೃತು ನಾಮ ಸಂವತ್ಸರ ಆರಂಭವಾಗಲಿದೆ. ಇದು ಏಪ್ರಿಲ್ 8, 2024ರ ತನಕ ಇರುತ್ತದೆ. ಈ ಸಂವತ್ಸರದಲ್ಲಿ ಮೇಷದಿಂದ ಮೀನದ ತನಕ ದ್ವಾದಶ ರಾಶಿಗಳ ಗೋಚಾರ ಫಲ ಹೇಗಿರುತ್ತದೆ ಎಂಬ ವಿವರ ಇಲ್ಲಿದೆ. ಅದಕ್ಕೂ ಮುನ್ನ ಈ ಸಂವತ್ಸರದಲ್ಲಿ ಪ್ರಮುಖ ಗ್ರಹಗಳಾದ ಶನಿ, ಗುರು, ರಾಹು- ಕೇತು ಸಂಚಾರದ ಬಗ್ಗೆ ವಿವರಗಳು ಇಲ್ಲಿವೆ.
ಶನಿ ಗ್ರಹವು ಯುಗಾದಿ ಆರಂಭದಿಂದ ಸಂವತ್ಸರದ ಅಂತ್ಯದ ತನಕ ಕುಂಭ ರಾಶಿಯಲ್ಲಿ ಸಂಚರಿಸಲಿದೆ. ಇನ್ನು ಗುರು ಗ್ರಹವು ಯುಗಾದಿ ಆರಂಭದಿಂದ ಏಪ್ರಿಲ್ 22, 2023ರ ತನಕ ಮೀನ, ಏಪ್ರಿಲ್ 22, 2023ರಿಂದ ಸಂವತ್ಸರದ ಅಂತ್ಯದ ತನಕ ಮೇಷ ರಾಶಿಯಲ್ಲಿ ಸಂಚಾರ ಇರುತ್ತದೆ. ಛಾಯಾ ಗ್ರಹಗಳಾದ ರಾಹು- ಕೇತುಗಳು ಯುಗಾದಿ ಆರಂಭದಿಂದ ಅಕ್ಟೋಬರ್ 30, 2023ರ ತನಕ ಮೇಷದಲ್ಲಿ ರಾಹು, ತುಲಾದಲ್ಲಿ ಕೇತು, ಇನ್ನು ಅಕ್ಟೋಬರ್ 30, 2023ರಿಂದ ಸಂವತ್ಸರದ ಕೊನೆ ತನಕ ಮೀನದಲ್ಲಿ ರಾಹು, ಕನ್ಯಾದಲ್ಲಿ ಕೇತು ಸಂಚಾರ ಇರುತ್ತದೆ.
ಇಲ್ಲಿರುವುದು ಗೋಚಾರ ಫಲ ಮಾತ್ರ. ಅಂದರೆ ಹನ್ನೆರಡು ರಾಶಿಗಳಿಗೆ
ಮೇಷ
ನಿಮ್ಮ ರಾಶಿಗೆ ಹನ್ನೊಂದನೇ ಮನೆಯಲ್ಲಿ ಶನಿ ಸಂಚಾರದ ವೇಳೆ ನಾನಾ ಬಗೆಯಲ್ಲಿ ಲಾಭ ಕಾಣುತ್ತೀರಿ. ಆಸ್ತಿ ಲಾಭ, ವಾಹನ ಲಾಭ, ಪ್ರಭಾವಿ ವ್ಯಕ್ತಿಗಳ ಜತೆಗೆ ಸಂಪರ್ಕ, ವರ್ತಕರು- ಉದ್ಯಮಿಗಳಿಗೆ ವ್ಯವಹಾರದಲ್ಲಿ ಅನುಕೂಲ ಇತ್ಯಾದಿ ಉತ್ತಮ ಫಲಗಳಿವೆ. ಇನ್ನು ಜನ್ಮ ರಾಶಿಯಲ್ಲಿ ಗುರು ಸಂಚಾರ ಇರುವಾಗ ಆರೋಗ್ಯ ಕಡೆಗೆ ಲಕ್ಷ್ಯ ನೀಡಿ. ಮಧುಮೇಹ, ರಕ್ತದೊತ್ತಡ, ಥೈರಾಯ್ಡ್, ಕಾಲು- ಬೆನ್ನು ನೋವು ಹೀಗೆ ವಿವಿಧ ಅನಾರೋಗ್ಯ ಸಮಸ್ಯೆಗಳನ್ನು ಈಗಾಗಲೇ ಎದುರಿಸುತ್ತಿದ್ದಲ್ಲಿ ಉಲ್ಬಣ ಆಗಲಿವೆ. ಇವುಗಳಿಗೆ ಮೊದಲ ಮುಂಜಾಗ್ರತೆ ಏನೆಂದರೆ, ಆಹಾರದಲ್ಲಿ ನಿಯಂತ್ರಣ ಸಾಧಿಸುವುದು. ಅದರ ಜತೆಗೆ ನಿಮ್ಮ ದೇಹಕ್ಕೆ ಅಗತ್ಯವಾದಷ್ಟು ಮಾತ್ರ ನೀರು ಸೇವನೆ ಮಾಡುವುದು. ಈ ಅವಧಿಯಲ್ಲಿ ನಿಮ್ಮ ಆತ್ಮವಿಶ್ವಾಸ ಜಾಸ್ತಿ ಆಗುತ್ತದೆ. ಆ ಕಾರಣಕ್ಕೆನಿಮಗಿಂತ ಬಲಿಷ್ಠರ ಜತೆಗೆ ಶತ್ರುತ್ವ ಬೇಡ. ಅಕ್ಟೋಬರ್ ತನಕ ನಿಮ್ಮ ಜನ್ಮ ರಾಶಿಯಲ್ಲೇ ರಾಹು ಹಾಗೂ ಏಳನೇ ಮನೆಯಲ್ಲಿ ಕೇತು ಸಂಚರಿಸುವಾಗ ಸಜ್ಜನರು ದೂರವಾಗುತ್ತಾರೆ, ದುಷ್ಟ ಜನರ ಸಹವಾಸ ಆಗುತ್ತದೆ. ನಾನೇ ಎಲ್ಲ ಎಂಬ ಅಹಂಭಾವ ತಲೆಗೆ ಏರುತ್ತದೆ. ಕುಟುಂಬದಲ್ಲಿ - ಪಾಲುದಾರಿಕೆ ವ್ಯವಹಾರದಲ್ಲಿ ಜಗಳ ಆಗಲಿದೆ. ಮಾತಿನಲ್ಲಿ ಎಚ್ಚರ ಇರಲಿ. ಸಂವತ್ಸರದ ಕೊನೆಗೆ ನಿಮ್ಮ ಪಾಲಿನ ಆದಾಯ- ವ್ಯಯ ಅಲ್ಲಿಂದ ಅಲ್ಲಿಗೆ ಎಂಬಂತೆ ಇರುತ್ತದೆ.
ವೃಷಭ
ಶನಿಯು ಕುಂಭ ರಾಶಿಯಲ್ಲಿ ಸಂಚರಿಸುವಾಗ ವೃತ್ತಿಯನ್ನು ಮಾಡುವವರು, ಉದ್ಯೋಗಿಗಳಿಗೆ ಉತ್ತಮ ಅವಧಿ ಅಲ್ಲ. ನೀವು ಮಾಡಿದ್ದ ಕೆಲಸಕ್ಕೆ ಬರಬೇಕಾದ ಮೆಚ್ಚುಗೆ, ಬಡ್ತಿ, ಸಂಬಳದ ಹೆಚ್ಚಳವು ಇತರರ ಪಾಲಾಗುತ್ತದೆ. ನಿಮಗೆ ಒಳ್ಳೆ ಉದ್ದೇಶ ಇರುತ್ತದೆ, ಹಾಗೆ ಹೇಳಿದ ವಿಚಾರವನ್ನು ಬೇರೆ ರೀತಿ ಗ್ರಹಿಸಿ, ಅಥವಾ ಒಂದಕ್ಕೆ ನಾಲ್ಕು ಏನೇನೋ ಸೇರಿಸಿಕೊಂಡು ಹೇಳಿ ನಿಮ್ಮ ಇಮೇಜ್ ಡ್ಯಾಮೇಜ್ ಮಾಡುವ ಕೆಲಸ ಆಗುತ್ತದೆ. ನಿಮಗೆ ಅಂತ ವಹಿಸಿದ ಕೆಲಸವನ್ನು ಇನ್ನೊಬ್ಬರಿಗೆ ವಹಿಸಬೇಡಿ. ಆಲಸ್ಯವೋ ತಿರಸ್ಕಾರವೋ ನಿಮಗೆ ಉರುಳಾಗಬಹುದು. ಏಪ್ರಿಲ್ ತಿಂಗಳ ಇಪ್ಪತ್ತೆರಡನೇ ತಾರೀಕಿನ ತನಕ ಹನ್ನೊಂದರಲ್ಲಿ ಗುರು ಸಂಚಾರ ವೇಳೆ ನಾನಾ ಲಾಭ ಆಗುತ್ತದೆ. ತೀರ್ಥಕ್ಷೇತ್ರ ದರ್ಶನ, ಗುರುಗಳ ಆರಾಧನೆಗೆ ಅವಕಾಶ, ಮನೆಯಲ್ಲಿ ನೆಮ್ಮದಿ, ಸಜ್ಜನರ ಒಡನಾಟ, ವ್ಯಾಪಾರ- ವ್ಯವಹಾರದಲ್ಲಿ ಲಾಭ ಹೀಗೆ ಶುಭ ಫಲಗಳಿವೆ. ಇದೇನಿದ್ದರೂ ಯುಗಾದಿಯಿಂದ ಒಂದು ತಿಂಗಳು ಮಾತ್ರ. ಹನ್ನೆರಡನೇ ಮನೆಯಲ್ಲಿ ಗುರು ಸಂಚಾರದ ವೇಳೆ ಖರ್ಚಿನ ಪ್ರಮಾಣ ಹೆಚ್ಚು. ಹನ್ನೆರಡರಲ್ಲಿ ಸಂಚರಿಸುವ ರಾಹು, ಆರನೇ ಮನೆಯಲ್ಲಿ ಕೇತು ಆದಾಯ- ವ್ಯಯದ ಬಗ್ಗೆ ಅಂದಾಜು ಸಿಗದಂಥ ಸ್ಥಿತಿಗೆ ದೂಡುತ್ತವೆ. ಹಣಕಾಸಿನ ವಿಚಾರದಲ್ಲಿ ಹಿಂಜರಿಕೆ ಕಾಡುತ್ತದೆ. ಈ ಸಂವತ್ಸರದ ಕೊನೆಗೆ ಭೂಮಿ ಲಾಭ ಇದೆ. ಹಿತಶತ್ರುಗಳಿಂದ ಎಚ್ಚರಕೆ ವಹಿಸುವುದು ತುಂಬ ಅಗತ್ಯ.
ಮಿಥುನ
ಈ ತನಕ ಕಾಡಿದ್ದ ಎಂಟನೇ ಮನೆಯ ಶನಿಯಿಂದ ದೊಡ್ಡ ಮಟ್ಟದಲ್ಲಿ ಚೇತರಿಕೆ ಸಿಗುತ್ತದೆ. ಆರೋಗ್ಯ ಸಮಸ್ಯೆಗಳು ನಿವಾರಣೆಯಾಗಿ ಅಥವಾ ಹತೋಟಿಗೆ ಬಂದು, ಚೇತರಿಕೆ ಕಂಡುಬರುತ್ತದೆ. ಅವಮಾನ ಎದುರಿಸುವ ಸನ್ನಿವೇಶಗಳು ಕಡಿಮೆ ಆಗುತ್ತವೆ. ನಿಮ್ಮ ತಂದೆ ಅಥವಾ ತಂದೆಗೆ ಸಮಾನರಾದವರು, ದೊಡ್ಡಪ್ಪ- ಚಿಕ್ಕಪ್ಪ, ಮಾವ ಇಂಥವರ ಆರೋಗ್ಯದ ಬಗ್ಗೆ ಎಚ್ಚರಿಕೆ ಅಗತ್ಯ. ಸಣ್ಣ- ಪುಟ್ಟ ಆರೋಗ್ಯ ಸಮಸ್ಯೆ ಎಂದು ನಿರ್ಲಕ್ಷ್ಯ ಮಾಡಿದಲ್ಲಿ ಅದು ದೊಡ್ಡದಾಗಿ ಕಾಡಬಹುದು. ಇನ್ನು ಗುರು ಹನ್ನೊಂದನೇ ಮನೆಯಲ್ಲಿ ಸಂಚರಿಸುವುದರಿಂದ ಈ ಹಿಂದಿನ ಹೂಡಿಕೆಗಳು ಅತ್ಯುತ್ತಮ ಲಾಭ ನೀಡುತ್ತವೆ. ನಿರೀಕ್ಷೆ ಮಾಡಿರದ ರೀತಿಯಲ್ಲಿ ಬಡ್ತಿ, ವೇತನ ಹೆಚ್ಚಳ ಕಾಣುತ್ತದೆ. ಮೇಲಧಿಕಾರಿಗಳು ನಿಮ್ಮ ಸಾಮರ್ಥ್ಯವನ್ನು ಗುರುತಿಸಿ, ಹೆಚ್ಚಿನ ಜವಾಬ್ದಾರಿ ಹಾಗೂ ಸ್ಥಾನ ನೀಡಲಿದ್ದಾರೆ. ಇನ್ನು ರಾಹು ಹನ್ನೊಂದನೇ ಮನೆ ಹಾಗೂ ಕೇತು ಐದನೇ ಮನೆಯಲ್ಲಿ ಸಂಚರಿಸುವಾಗ ಜಾಗ ಖರೀದಿ, ಸಟ್ಟಾ ವ್ಯವಹಾರದಲ್ಲಿ ಲಾಭ, ವಿದೇಶ ವ್ಯವಹಾರಗಳಿಂದ ಲಾಭ ಮೊದಲಾದವು ಇವೆ. ಆದರೆ ಮಕ್ಕಳ ಆರೋಗ್ಯ, ಯಾರ ಜತೆಗೆ ಸ್ನೇಹದಿಂದ ಇದ್ದಾರೆ ಗಮನಿಸಿ. ಇನ್ನು ಅಕ್ಟೋಬರ್ ತಿಂಗಳ ನಂತರದಲ್ಲಿ ರಾಹು ಹತ್ತನೇ ಮನೆಗೆ, ಕೇತು ನಾಲ್ಕನೇ ಮನೆಗೆ ಪ್ರವೇಶ ಆಗುತ್ತದೆ. ದಿಢೀರ್ ಎಂದು ಬರುವ ಹಣಕ್ಕೆ ಆಸೆ ಪಟ್ಟರೆ ಸಮಸ್ಯೆ ಮೈಮೇಲೆ ಎಳೆದುಕೊಂಡಂತೆ ಆಗುತ್ತದೆ. ಉದ್ಯೋಗಿಗಳು ಎಚ್ಚರಿಕೆ ವಹಿಸಿ.
ಕರ್ಕಾಟಕ
ಈ ಸಂವತ್ಸರ ನಿಮಗೆ ಶನಿಯು ಎಂಟನೇ ಮನೆಯಲ್ಲಿ ಸಂಚರಿಸುತ್ತದೆ. ಆದ್ದರಿಂದ ಶನೈಶ್ಚರ ಶಾಂತಿ ಮಾಡಿಸಿಕೊಳ್ಳುವುದು ಅಗತ್ಯ. ಇದರ ಜತೆಗೆ ಆಂಜನೇಯ, ಶಿವನ ಆರಾಧನೆ ಮಾಡಿ. ಈ ಅವಧಿಯಲ್ಲಿ ವಿವಿಧೆಡೆ ಅವಮಾನಗಳಾಗುತ್ತವೆ. ಅಪಘಾತ ಆಗಬಹುದು. ಕಾಯಿಲೆ ಏನು ಅಂತ ಗೊತ್ತಾಗದಂಥ ಸ್ಥಿತಿ ಸೃಷ್ಟಿ ಆಗಲಿದೆ. ಒಂದು ವೇಳೆ ನಿಮ್ಮ ಜನ್ಮ ಜಾತಕದಲ್ಲಿ ಶನಿ ಗ್ರಹ ದುರ್ಬಲವಾಗಿದ್ದಲ್ಲಿ, ನೀಚ ಸ್ಥಿತಿಯಲ್ಲಿ ಇದ್ದಲ್ಲಿ ಅಥವಾ ಉತ್ತಮ ಅಲ್ಲದ ದಶಾ- ಭುಕ್ತಿಗಳು ನಡೆಯುತ್ತಿದ್ದಲ್ಲಿ ಸರಿಯಾದ ಜ್ಯೋತಿಷಿಗಳಲ್ಲಿ ಜಾತಕ ತೋರಿಸಿಕೊಳ್ಳುವುದು ಉತ್ತಮ. ಯುಗಾದಿಯಿಂದ ಕೇವಲ ಒಂದು ತಿಂಗಳ ಕಾಲ ಒಂಬತ್ತನೇ ಮನೆಯಲ್ಲಿ ಮತ್ತು ಆ ನಂತರ ನಿಮ್ಮ ರಾಶಿಯಿಂದ ಹತ್ತನೇ ಮನೆಯಲ್ಲಿ ಸಂಚರಿಸಲಿದೆ. ಪಿತ್ರಾರ್ಜಿತ ಆಸ್ತಿ ಬರಬೇಕಿದ್ದಲ್ಲಿ ಬರುತ್ತದೆ. ಅಥವಾ ನ್ಯಾಯಾಲಯದಲ್ಲಿ ವ್ಯಾಜ್ಯ, ಮೊಕದ್ದಮೆಗಳು ಇದ್ದಲ್ಲಿ ರಾಜೀ- ಸಂಧಾನದ ಮೂಲದ ಬಗೆಹರಿಯಬಹುದು. ಯಾವುದಕ್ಕೆ ಅದೃಷ್ಟ ಇರಬೇಕು ಅಂದುಕೊಳ್ಳುತ್ತೀರೋ ಅವು ನಿಮ್ಮ ಪರವಾಗಿ ಆಗಲಿವೆ. ಇನ್ನು ಅಕ್ಟೋಬರ್ ತನಕ ರಾಹು ಹತ್ತನೇ ಮನೆಯಲ್ಲಿ, ಕೇತು ನಾಲ್ಕನೇ ಮನೆಯಲ್ಲಿ ಸಂಚರಿಸುವಾಗ ಉದ್ಯೋಗ ಸ್ಥಳದಲ್ಲಿ ನಿಮ್ಮ ಬೆನ್ನ ಹಿಂದೆ ನಡೆಯುವ ಹಲವು ವಿಚಾರಗಳು ಗಮನಕ್ಕೆ ಬಾರದಿರಬಹುದು. ಇನ್ನು ಸಂವತ್ಸರದ ಕೊನೆ ಭಾಗದಲ್ಲಿ ಸಹೋದರ- ಸಹೋದರಿಯರಿಂದ ಅನುಕೂಲ, ತಂದೆಯ ಆರೋಗ್ಯದಲ್ಲಿ ಸಮಸ್ಯೆ ಆಗಬಹುದು.
ಸಿಂಹ
ಈ ಸಂವತ್ಸರ ಏಳನೇ ಮನೆಯಲ್ಲಿ ಶನಿ ಸಂಚರಿಸುವಾಗ ನಿಮ್ಮ ಕೈ ಕೆಳಗೆ ಕೆಲಸ ಮಾಡುವವರ ಬಳಿ ಯಾವುದೇ ಹಣಕಾಸಿನ ವ್ಯವಹಾರ ಮಾಡದಿರಿ. ಯಾವುದೇ ಕೆಲಸ ಕುತ್ತಿಗೆಗೆ ಬರುವ ತನಕ ಕಾಯಬೇಡಿ. ಸೋಮಾರಿತನ ಬಿಡಬೇಕು ಹಾಗೂ ಕ್ರೆಡಿಟ್ ಕಾರ್ಡ್ ಹಾಗೂ ಇಎಂಐಗಳನ್ನು ಕಟ್ಟಬೇಕಾದ ಸರಿಯಾದ ದಿನಾಂಕಕ್ಕೆ ಕಟ್ಟಿಬಿಡಿ. ಪಾಲುದಾರಿಕೆ ವ್ಯವಹಾರಗಳಲ್ಲಿ ಏನೋ ಸರಿಹೋಗುತ್ತಿಲ್ಲ ಎಂಬ ಭಾವನೆ ಮೂಡುತ್ತದೆ. ಸಂಗಾತಿಯ ಜತೆ ಪಾರದರ್ಶಕವಾಗಿ ಇರುವುದು ಉತ್ತಮ. ಏಪ್ರಿಲ್ ಇಪ್ಪತ್ತೆರಡನೇ ತಾರೀಕಿನಿಂದ ಬೃಹಸ್ಪತಿ ನಿಮ್ಮ ಕರ್ಮ ಸ್ಥಾನದಲ್ಲಿ ಅಂದರೆ, ಹತ್ತನೇ ಮನೆಯಲ್ಲಿ ಸಂಚಾರ ಮಾಡುವಾಗ ಉದ್ಯೋಗ ಸ್ಥಳದಲ್ಲಿ ಉತ್ತಮ ಬೆಳವಣಿಗೆ ಕಾಣಬಹುದು. ವಿದೇಶಗಳಿಗೆ ತೆರಳಬೇಕು ಎಂದಿರುವವರಿಗೆ ಒಂದಿಷ್ಟು ಶ್ರಮ ಆಗಬಹುದು, ಆದರೆ ಅನುಕೂಲ ಆಗುವಂಥ ಅವಕಾಶ ಇದೆ. ಅಲ್ಪಾವಧಿಗಾದರೂ ವಿದೇಶಗಳಿಗೆ ತೆಳುವಂಥ ಯೋಗ ಇದೆ. ಒಂಬತ್ತನೇ ಮನೆಯಲ್ಲಿ ಸಂಚರಿಸುವ ರಾಹುವಿನಿಂದಾಗಿ ತಂದೆ ಅಥವಾ ತಂದೆ ಸಮಾನರಾದವರ ಜತೆಗೆ ವೈಮನಸ್ಯ, ಭಿನ್ನಾಭಿಪ್ರಾಯ ಏರ್ಪಡಬಹುದು. ಆರೋಗ್ಯದ ಸಲುವಾಗಿ ಹೆಚ್ಚಿನ ಖರ್ಚಾಗಲಿದೆ. ಮೂರನೇ ಮನೆಯಲ್ಲಿ ಸಂಚರಿಸುವ ಕೇತು ಸಹೋದರ- ಸಹೋದರಿಯರ ಮೂಲಕ ಲಾಭ ತರುತ್ತದೆ. ಸಂವತ್ಸರದ ಬಹುತೇಕ ಆರು ತಿಂಗಳ ಕಾಲ ಯಾವುದೇ ಕಾರ್ಯದ ಬಗ್ಗೆ ಹಗಲುಗನಸು ಕಾಣಬೇಡಿ, ಚರ್ಮಕ್ಕೆ ಸಂಬಂಧ ಪಟ್ಟ ಅನಾರೋಗ್ಯ ಸಮಸ್ಯೆಗಳು ನಿಮ್ಮನ್ನು ಕಾಡಬಹುದು.
ಕನ್ಯಾ
ಈ ಸಂವತ್ಸರದಲ್ಲಿ ಆರನೇ ಮನೆಯಲ್ಲಿ ಶನಿ ಸಂಚರಿಸುವುದರಿಂದ ಹಣಕಾಸಿನ ಆದಾಯ ಮೂಲಗಳು ಹಾಗೂ ಆದಾಯದ ಪ್ರಮಾಣವು ಜಾಸ್ತಿ ಆಗುತ್ತವೆ. ಬಹಳ ವರ್ಷಗಳಿಂದ ಕಾಡುತ್ತಿದ್ದ ನಿಮ್ಮ ಆರ್ಥಿಕ ಸವಾಲುಗಳನ್ನು ನಿರ್ವಹಿಸಲು ಬಲ ದೊರೆಯುತ್ತದೆ. ದೊಡ್ಡ ಮೊತ್ತದ ಸಾಲಗಳು ಇದ್ದಲ್ಲಿ ತೀರಿಸಿಕೊಳ್ಳುತ್ತೀರಿ. ಆತ್ಮವಿಶ್ವಾಸವು ಹೆಚ್ಚಾಗುತ್ತದೆ. ಹೊಸ ಯೋಜನೆಗಳನ್ನು ಈಗ ಅನುಷ್ಠಾನಕ್ಕೆ ತರುತ್ತೀರಿ. ಯುಗಾದಿಯಿಂದ ಒಂದು ತಿಂಗಳ ತನಕ ಏಳನೇ ಮನೆಯಲ್ಲಿ ಗುರು ಸಂಚರಿಸುವಾಗ ಪಾಲುದಾರಿಕೆ ವ್ಯವಹಾರಗಳು ಉತ್ತಮಗೊಳ್ಳುತ್ತವೆ. ಸಾಂಸಾರಿಕವಾಗಿ ನೆಮ್ಮದಿಯನ್ನು ಕಾಣುತ್ತೀರಿ. ದೂರ ಪ್ರದೇಶ ಹಾಗೂ ವಿದೇಶಗಳಿಂದ ಶುಭ ಸುದ್ದಿ ಕೇಳಿಬರುತ್ತದೆ. ಏಪ್ರಿಲ್ನಿಂದ ಗುರು ಎಂಟನೇ ಮನೆಯಲ್ಲಿ ಸಂಚರಿಸುವಾಗ ತೆರಿಗೆ ಮತ್ತಿತರ ಶುಲ್ಕಗಳ ಕಡೆಗೆ ಲಕ್ಷ್ಯ ನೀಡಿ. ಈ ಅವಧಿಯಲ್ಲಿ ದೇಹದ ತೂಕ ಜಾಸ್ತಿ ಆಗಬಹುದು. ನಾಲಗೆ ಚಪಲ ಕಡಿಮೆ ಮಾಡಿಕೊಳ್ಳಿ. ಕಾನೂನು ವ್ಯಾಜ್ಯಗಳನ್ನು ಮೈಮೇಲೆ ಎಳೆದುಕೊಳ್ಳುವ ಸಾಧ್ಯತೆ ಇದೆ. ಮತ್ತೊಬ್ಬರಿಗಾಗಿ ಜಾಮೀನು ನಿಲ್ಲಬೇಡಿ. ಅಕ್ಟೋಬರ್ ಮೂವತ್ತರ ತನಕ ಎಂಟನೇ ಮನೆಯ ರಾಹು ಹಾಗೂ ಎರಡನೇ ಮನೆಯಲ್ಲಿ ಸಂಚರಿಸುವ ಕೇತು ಒಳ್ಳೆ ಫಲಗಳನ್ನು ನೀಡುವುದಿಲ್ಲ. ಚರ್ಮ ವ್ಯಾಧಿಗಳು ಕಾಣಿಸಬಹುದು. ಗುಪ್ತಾಂಗ ಕಾಯಿಲೆ ಕಾಣಿಸಿಕೊಳ್ಳಬಹುದು. ಸಂಸಾರದಲ್ಲಿ ಕಲಹ ಆಗದಂತೆ ಎಚ್ಚರಿಕೆ ವಹಿಸಿ. ಅಕ್ಟೋಬರ್ ತಿಂಗಳಾದ ಮೇಲೆ ವಿವಾಹದ ಆಚೆಗಿನ ಸಂಬಂಧಗಳ ಕಡೆಗೆ ಮನಸ್ಸು ವಾಲದಿರಲಿ.
ತುಲಾ
ಈ ಸಂವತ್ಸರದಲ್ಲಿ ಐದನೇ ಮನೆಯಲ್ಲಿ ಶನಿ ಸಂಚಾರ ಇರುತ್ತದೆ. ಹೀಗೆ ಐದನೇ ಮನೆಯಲ್ಲಿ ಸಂಚರಿಸುವಾಗ ನೀವೆಷ್ಟು ಧರ್ಮದ ದಾರಿಯಲ್ಲಿ ನಡೆದುಕೊಳ್ಳುತ್ತೀರೋ, ಸತ್ಯವಾಗಿ ಇರುತ್ತೀರೋ ಅದರ ಆಧಾರದ ಮೇಲೆ ನೀವು ನೆಮ್ಮದಿಯಾಗಿ ಇರುವುದಕ್ಕೆ ಸಾಧ್ಯ. ಈ ಹಿಂದೆ ನಿಮ್ಮನ್ನು ಕಾಡುತ್ತಿರುವ ಹಳೆಯ ಕಾಯಿಲೆಗಳು ಹೆಚ್ಚಾಗಬಹುದು. ಯಾವುದೇ ಕಾರಣಕ್ಕೂ ಮನೆ ಮದ್ದು ಅಥವಾ ನಿಮಗೆ ನೀವೇ ಔಷಧ ಮಾಡಿಕೊಳ್ಳಬೇಡಿ. ಅಂದರೆ ಸ್ವಯಂ ವೈದ್ಯ ಮಾಡಕೂಡದು. ಅಂದ ಹಾಗೆ ಸುಲಭಕ್ಕೆ ಪತ್ತೆ ಹಚ್ಚಲು ಸಾಧ್ಯವಾಗದ ಆರೋಗ್ಯ ಸಮಸ್ಯೆಗಳು ಕೆಲವು ಕಾಡಬಹುದು. ಯಾವ ವೈದ್ಯರೂ ಹಾಗೂ ಯಾವ ಔಷಧವೂ ಕೆಲಸಕ್ಕೆ ಬರುತ್ತಿಲ್ಲ ಎನಿಸಬಹುದು. ಆದರೆ ಇದರಿಂದ ಧೈರ್ಯ ಕಳೆದುಕೊಳ್ಳಬೇಡಿ. ದೇವರ ಮೇಲೆ ನಂಬಿಕೆಯನ್ನು ಬಿಡಬೇಡಿ. ಯಾರೂ ಗಮನಿಸುತ್ತಿಲ್ಲ ಅಂತಲೋ ಅಥವಾ ಇನ್ಯಾರೋ ತಪ್ಪು ಮಾಡಿದರೂ ಸಿಕ್ಕಿಬೀಳಲಿಲ್ಲ ಎಂಬ ಹುಂಬ ಆಲೋಚನೆಯಲ್ಲಿ ತಪ್ಪು ಮಾಡಬೇಡಿ. ಅಕ್ಟೋಬರ್ ತನಕ ಜನ್ಮ ರಾಶಿಯಲ್ಲೇ ಕೇತು ಹಾಗೂ ಸಪ್ತಮದಲ್ಲಿ ರಾಹು ಇರುತ್ತದೆ. ಆ ವೇಳೆಯಲ್ಲಿ ಪಾಪ ಕರ್ಮಾಸಕ್ತಿ ಹೆಚ್ಚು ಮಾಡುತ್ತವೆ. ಸಂಗಾತಿ ಬಗ್ಗೆ ಇಲ್ಲ ಸಲ್ಲದ ಅನುಮಾನ, ವಿವಾಹದ ಆಚೆಗಿನ ಸಂಬಂಧಗಳ ಕಡೆಗೆ ಸೆಳೆತ ಇತ್ಯಾದಿ ದುರಾಲೋಚನೆಗಳು ಬರುತ್ತವೆ. ಗಣಪತಿ- ಸುಬ್ರಹ್ಮಣ್ಯ ಆರಾಧನೆ ಮಾಡಿ. ಅಕ್ಟೋಬರ್ ನಂತರ ಭೂಮಿ ಖರೀದಿಗೆ ಪ್ರಯತ್ನಿಸಬಹುದು.
ವೃಶ್ಚಿಕ
ಈ ಸಂವತ್ಸರದಲ್ಲಿ ನಿಮ್ಮ ರಾಶಿಗೆ ನಾಲ್ಕರಲ್ಲಿ ಶನಿ ಸಂಚಾರ ಇರುತ್ತದೆ. ನಿಮ್ಮಲ್ಲಿ ಹಲವರಿಗೆ ಆದಾಯ ಇಳಿಕೆ ಗಮನಕ್ಕೆ ಬರಲಿದೆ. ಲೆಕ್ಕಾಚಾರ ಇಲ್ಲದಂತೆ ಯಾವುದೇ ದೊಡ್ಡ ಪ್ರಾಜೆಕ್ಟ್ಗಳಿಗೆ ತೊಡಗಿಕೊಳ್ಳದಿರಿ. ಸಾಲ ಮಾಡಬೇಕು ಎಂದಿದ್ದಲ್ಲಿ ಮುಂದಕ್ಕೆ ಹಾಕುವುದು ಉತ್ತಮ. ಈಗಾಗಲೇ ಯಾವುದಾದರೂ ಯೋಜನೆಯಲ್ಲಿ ಮುಂದುವರಿದಿದ್ದೀನಿ ಅಂತಾದರೆ ಹಣಕಾಸು ಸಂಗತಿಗಳಲ್ಲಿ ಅಳತೆ ಮೀರದಿರಿ. ವಯಸ್ಸಾದ ಅಥವಾ ಈಗಾಗಲೇ ಅನಾರೋಗ್ಯ ಇರುವ ತಾಯಿ ಇದ್ದಲ್ಲಿ ಸೂಕ್ತ ವೈದ್ಯಕೀಯ ಪರೀಕ್ಷೆ ಮಾಡಿಸಿ. ನಿಮ್ಮಿಂದ ಪೂರೈಸಲಾಗದ ಮಾತು ನೀಡದಿರಿ. ಯುಗಾದಿಯಿಂದ ಒಂದು ತಿಂಗಳು ಮಾತ್ರ ಐದನೇ ಮನೆಯಲ್ಲಿ ಗುರು ಸಂಚಾರ ಇರುತ್ತದೆ. ಈ ವೇಳೆ ಒಳ್ಳೆ ಸಮಯ. ಉತ್ತಮ ಫಲಗಳು ಸಿಗುತ್ತವೆ. ಅದಾದ ಮೇಲೆ ಸಂವತ್ಸರದ ಕೊನೆ ತನಕ ಆರನೇ ಮನೆಯಲ್ಲಿ ಗುರು ಸಂಚರಿಸುವಾಗ ಉದ್ಯೋಗ ಸ್ಥಳದಲ್ಲಿ ಮೇಲಧಿಕಾರಿಗಳ ಜತೆಗೆ ಮಾತುಕತೆ ವೇಳೆ ಭಿನ್ನಾಭಿಪ್ರಾಯ ಏರ್ಪಡದಂತೆ ಎಚ್ಚರಿಕೆಯಿಂದ ಇರಬೇಕು. ಸರ್ಕಾರದ ವ್ಯವಹಾರದಲ್ಲಿ ಕಾಗದ- ಪತ್ರಗಳನ್ನು ಸರಿಯಾಗಿ ಪರೀಕ್ಷಿಸಿ. ಹನ್ನೆರಡನೇ ಮನೆ ಕೇತು ಖರ್ಚನ್ನು ಹೆಚ್ಚು ಮಾಡಿಸಿದರೂ ದೇವತಾ ಆರಾಧನೆ ಕಡೆಗೆ ಮನಸ್ಸು ನೀಡುತ್ತದೆ. ಆರನೇ ಮನೆ ರಾಹು ಭೂಮಿ, ಷೇರು, ಮ್ಯೂಚುವಲ್ ಫಂಡ್ಗಳ ಮೂಲಕ ಆದಾಯ ತರುತ್ತದೆ. ಅಕ್ಟೋಬರ್ ನಂತರ ಮಕ್ಕಳ ಓದು, ಆರೋಗ್ಯದ ಕಡೆಗೆ ಲಕ್ಷ್ಯ ನೀಡಬೇಕು.
ಧನುಸ್ಸು
ಈ ಸಂವತ್ಸರದಲ್ಲಿ ಏಳೂವರೆ ವರ್ಷ ನಿಮ್ಮನ್ನು ಕಾಡಿದ ಸಾಡೇಸಾತ್ ಶನಿ ಗ್ರಹದ ಪ್ರಭಾವವು ಸಂಪೂರ್ಣವಾಗಿ ದೂರ ಆಗುತ್ತದೆ. ಇನ್ನು ನಿಮ್ಮ ರಾಶಿಯಿಂದ ಮೂರನೇ ಮನೆಯಲ್ಲಿ ಶನಿ ಸಂಚರಿಸುವಾಗ ಆರ್ಥಿಕ ಸ್ಥಿತಿಯಲ್ಲಿ ಬದಲಾವಣೆ ಆಗುತ್ತದೆ. ಆದಾಯದ ಮೂಲ ಹೆಚ್ಚಾಗಲಿದೆ. ಕೆಲಸ ಬದಲಾವಣೆಯೊಂದಿಗೆ ಸಂಬಳದಲ್ಲಿ ಹೆಚ್ಚಳ, ಪ್ರಮೋಷನ್, ಹೊಸ ವ್ಯಾಪಾರದ ಆಲೋಚನೆಗಳು ಬರಬಹುದು. ಹೊಸ ವ್ಯಾಪಾರ ಶುರು ಮಾಡಬೇಕಿರುವವರಿಗೆ ಅನುಕೂಲ ದೊರೆಯಲಿದೆ. ಗುರು ಗ್ರಹ ನಾಲ್ಕನೆ ಮನೆಯಲ್ಲಿ, ಏಪ್ರಿಲ್ ತನಕ ಮೀನದಲ್ಲಿ ಸಂಚಾರ ಮಾಡುವಾಗ ಮನೆ- ಸೈಟು ಖರೀದಿ, ಮನೆ ಕಟ್ಟಿಸುವ ಯೋಗ, ಕಾರು- ಬೈಕ್ಗಳ ಖರೀದಿ ಯೋಗ ಇವೆ. ಏಪ್ರಿಲ್ನಲ್ಲಿ ಗುರುವು ಐದನೇ ಮನೆಯಲ್ಲಿ ಸಂಚಾರ ಮಾಡುವಾಗ ದೂರದ ಪ್ರದೇಶಗಳಿಗೆ ತೆರಳುವ ಯೋಗ, ಅದರಿಂದ ಲಾಭ ಆಗುವ ಯೋಗಗಳಿವೆ. ಹನ್ನೊಂದನೇ ಮನೆಯಲ್ಲಿ ಕೇತು ಸಂಚರಿಸುವಾಗ ಅದೃಷ್ಟ ಬಲದಿಂದ ವ್ಯಾಜ್ಯ, ತಂಟೆ- ತಕರಾರು ಇದ್ದಲ್ಲಿ ನಿವಾರಣೆ ಆಗುತ್ತವೆ. ಐದನೇ ಮನೆಯಲ್ಲಿ ರಾಹು ಸಂಚರಿಸುವುದರಿಂದ ಮಕ್ಕಳ ಆರೋಗ್ಯದ ಕುರಿತು ಜಾಗ್ರತೆಯಿಂದ ಇರಬೇಕು. ಅಕ್ಟೋಬರ್ ತಿಂಗಳ ನಂತರದಲ್ಲಿ ನಾಲ್ಕನೇ ಮನೆಯಲ್ಲಿ ರಾಹು ಸಂಚಾರ ಹಾಗೂ ಹತ್ತನೇ ಮನೆಯಲ್ಲಿ ಕರ್ಮ ಸ್ಥಾನದಲ್ಲಿ ಕೇತು ಸಂಚರಿಸುವಾಗ ನಿಮ್ಮ ತಾಯಿಯನ್ನು ಜೋಪಾನವಾಗಿ ನೋಡಿಕೊಳ್ಳಿ. ಅವರಿಗೆ ಮರೆವು, ಅನಾರೋಗ್ಯ ಇತ್ಯಾದಿ ಆಗಬಹುದು.
ಮಕರ
ಈ ಸಂವತ್ಸರದಲ್ಲಿ ಕುಂಭದಲ್ಲಿನ ಶನಿ ಎರಡನೇ ಮನೆಯಲ್ಲಿ ಸಂಚಾರ ಇರುತ್ತದೆ. ಧನ ಸ್ಥಾನದಲ್ಲಿ ಸಂಚಾರ ಆಗುವಾಗ ಹಣದ ಹರಿವು ಸ್ವಲ್ಪ ಸರಾಗ ಆಗುತ್ತದೆ. ಈ ಮಧ್ಯೆ ಒತ್ತಡ, ಹಿಂಸೆ ಅಥವಾ ಅವಮಾನ ಮಾಡುತ್ತಿದ್ದಾರೆ ಹೀಗೆ ಯಾವುದೇ ಕಾರಣಕ್ಕೂ ಕೆಲಸ ಬಿಡಬೇಡಿ. ಯುಗಾದಿಯಿಂದ ಒಂದು ತಿಂಗಳ ತನಕ ಗುರು ಮೂರನೇ ಮನೆಯಲ್ಲಿ ಮತ್ತು ಆ ನಂತರ ಸಂವತ್ಸರದ ಕೊನೆಯ ತನಕ ನಾಲ್ಕನೇ ಮನೆಯಲ್ಲಿ ಸಂಚಾರ ಮಾಡಲಿದೆ. ಏನೇ ಸಾಲ ಇದ್ದರೂ ತೀರಿಸುವ ಧೈರ್ಯ ಒಂದು ತಿಂಗಳು ಮಾತ್ರ ಇರುತ್ತದೆ. ಏಪ್ರಿಲ್ ಇಪ್ಪತ್ತನೇ ತಾರೀಕಿನಿಂದ ಗುರು ನಾಲ್ಕನೇ ಮನೆಯಲ್ಲಿ ಸಂಚರಿಸುವಾಗ ನಿರೀಕ್ಷೆಯೇ ಮಾಡದ ರೀತಿಯಲ್ಲಿ ಭೂಮಿ, ಮನೆ ಲಾಭ ಆಗುವ ಅಥವಾ ದೊಡ್ಡ ಮೊತ್ತ ಕೈ ಸೇರುವ ಸಾಧ್ಯತೆ ಇದೆ. ಹಿರಿಯರು- ಅನುಭವಿಗಳ ಮಾರ್ಗದರ್ಶನ ಅಗತ್ಯ ಇರುವ ಕಡೆಗೆ ಅದನ್ನು ಪಡೆದುಕೊಳ್ಳಿ. ಈ ವರ್ಷದ ಹತ್ತು ತಿಂಗಳು, ಅಂದರೆ ಅಕ್ಟೋಬರ್ ತನಕ ನಾಲ್ಕನೇ ಮನೆಯಲ್ಲಿ ರಾಹು ಇದ್ದು, ನಿಮ್ಮದೇ ಅನುಕೂಲಗಳು ದೊರೆಯದಂತಾಗುತ್ತದೆ. ಅದೇ ರೀತಿ ನಿಮ್ಮ ರಾಶಿಯಿಂದ ಹತ್ತನೇ ಮನೆಯಲ್ಲಿ ಕೇತು ಇರುವುದರಿಂದ ಉದ್ಯೋಗ, ವೃತ್ತಿಯಲ್ಲಿ ಸವಾಲುಗಳು ಜಾಸ್ತಿ ಆಗುತ್ತವೆ. ಅಕ್ಟೋಬರ್ ನಂತರ ಭೂಮಿಯಿಂದ ಲಾಭ ಇದೆ. ತಂದೆಯವರ ಸಲುವಾಗಿ ಹೆಚ್ಚಿನ ಖರ್ಚಿದೆ.
ಕುಂಭ
ಈ ಸಂವತ್ಸರದಲ್ಲಿ ನಿಮ್ಮ ಜನ್ಮ ರಾಶಿಯಲ್ಲಿ ಶನಿ ಗ್ರಹವು ಸಂಚರಿಸುವಾಗ ಸಾಡೇಸಾತ್ ಎರಡನೇ ಹಂತವು ಆರಂಭ ಆಗುತ್ತದೆ. ಇದರೊಂದಿಗೆ ಆರೋಗ್ಯದ ಮೇಲೆ ಪರಿಣಾಮ ಬೀರುತ್ತದೆ. ದೀರ್ಘಾವಧಿ ಕಾಯಿಲೆಯಿಂದ ಬಳಲುವಂತಾಗುತ್ತದೆ. ವೈದ್ಯರ ಸಲಹೆ- ಸೂಚನೆ ಪಡೆಯದೆ ನೀವಾಗಿಯೇ ಡಯೆಟ್, ಪಥ್ಯ, ಹೊಸ ಔಷಧ ತೆಗೆದುಕೊಳ್ಳಬೇಡಿ. ಯುಗಾದಿಯಿಂದ ಒಂದು ತಿಂಗಳು ಎರಡನೇ ಮನೆಯಲ್ಲಿ ಗುರು ಸಂಚಾರ ಮಾಡುವುದರಿಂದ ಹಣಕಾಸಿನ ಹರಿವಿಗೆ ಸಮಸ್ಯೆ ಏನೂ ಕಾಡುವುದಿಲ್ಲ. ಸಾಂಸಾರಿಕವಾಗಿಯೂ ನೆಮ್ಮದಿ ಇರಲಿದೆ.ಮನೆಯಲ್ಲಿ ಶಾಂತಿ ನೆಲೆಸಿರುತ್ತದೆ. ಏಪ್ರಿಲ್ನಿಂದ ಮೂರನೇ ಮನೆಯಲ್ಲಿ ಗುರು ಸಂಚರಿಸುವಾಗ ಆತ್ಮವಿಶ್ವಾಸ ಇರುತ್ತದೆ. ಯಾವುದೇ ಕೆಲಸ ಮುಗಿಸುತ್ತೀರಿ. ಸಹೋದರ- ಸಹೋದರಿಯರ ಬೆಂಬಲ ನಿಮ್ಮ ಪಾಲಿಗೆ ಒದಗಿ ಬರಲಿದೆ. ಇದರೊಂದಿಗೆ ಕೆಲವು ಕಠಿಣ ಕೆಲಸ ಸಹ ಸಲೀಸಾಗಿ ಮುಗಿಸುವುದಕ್ಕೆ ಸಾಧ್ಯವಾಗುತ್ತದೆ. ನಿಮ್ಮ ರಾಶಿಯಿಂದ ಮೂರನೇ ಮನೆಯಲ್ಲಿ ರಾಹು ಸಂಚರಿಸುವುದರಿಂದ ರಿಯಲ್ ಎಸ್ಟೇಟ್ ವ್ಯವಹಾರ ನಡೆಸುವಂಥವರಿಗೆ, ಷೇರು ವ್ಯವಹಾರದಲ್ಲಿ ಇರುವಂಥವರಿಗೆ ಹಣದ ಹರಿವು ಉತ್ತಮವಾಗಿ ಇರುತ್ತದೆ. ಇನ್ನು ಅಕ್ಟೋಬರ್ ತನಕ ಒಂಬತ್ತರಲ್ಲಿ ಕೇತು ಸಂಚಾರ ಇರುವುದರಿಂದ ತಂದೆ ಆರೋಗ್ಯದ ಬಗ್ಗೆ ಕಾಳಜಿ ವಹಿಸಿ. ಅಕ್ಟೋಬರ್ ನಂತರದಲ್ಲಿ ಎಷ್ಟೇ ಹಣ ಬಂದರೂ ಉಳಿತಾಯ ಸಾಧ್ಯ ಆಗುವುದಿಲ್ಲ. ಚರ್ಮಕ್ಕೆ ಸಂಬಂಧಿಸಿದ ಅನಾರೋಗ್ಯ ಸಮಸ್ಯೆ, ಕೂದಲು ಉದುರುವುದು ಇಂಥ ಸಮಸ್ಯೆ ಕಾಣಿಸಿಕೊಳ್ಳಬಹುದು.
ಮೀನ
ಈ ಸಂವತ್ಸರದಲ್ಲಿ ಶನಿ ಸಂಚಾರ ನಿಮ್ಮ ವ್ಯಯ ಸ್ಥಾನದಲ್ಲಿ, ಅಂದರೆ ಹನ್ನೆರಡನೇ ಮನೆಯಲ್ಲಿ ಆಗಲಿದೆ. ಸಾಡೇಸಾತ್ ಶನಿಯ ಆರಂಭದ ಘಟ್ಟ ಇದಾಗಿರುತ್ತದೆ. ಯುಗಾದಿಯ ಒಂದು ತಿಂಗಳ ತನಕ ಜನ್ಮ ರಾಶಿಯಲ್ಲೇ ಇರುವ ಗುರುವಿನಿಂದ ದುಃಖಗಳು ಅನುಭವಿಸಬೇಕಾಗುತ್ತದೆ. ಆರೋಗ್ಯ ಸಮಸ್ಯೆಗಳು, ಇತರರಿಂದ ಅವಮಾನ ಇವೆಲ್ಲ ಇರುತ್ತದೆ. ಏಪ್ರಿಲ್ ನಂತರ ಎರಡನೇ ಮನೆಗೆ ಗುರು ಗ್ರಹದ ಪ್ರವೇಶ ಆಗುತ್ತದೆ. ಈ ಸಂದರ್ಭದಲ್ಲಿ ಕುಟುಂಬ- ಧನ ಸ್ಥಾನದಲ್ಲಿ ಸಂಚರಿಸುವ ಗುರು ಗ್ರಹದ ಅನುಗ್ರಹದಿಂದಾಗಿ ಸಂಸಾರದಲ್ಲಿ ಸಂತೋಷ, ನೆಮ್ಮದಿ ವಾತಾವರಣ, ಹಣಕಾಸಿನ ಸಮಸ್ಯೆಗಳು ಇಳಿಮುಖ ಆಗುವುದು ಮೊದಲಾದ ಶುಭ ಫಲಗಳನ್ನು ಪಡೆಯಲಿದ್ದೀರಿ. ಆಸ್ತಿ- ವಾಹನಗಳ ಖರೀದಿಗೆ ಅನುಕೂಲ, ಸಮಾಜದಲ್ಲಿ ಪ್ರಭಾವಿಗಳ ಜತೆಗೆ ನಿಮ್ಮ ಸ್ನೇಹ ಬೆಳೆಯುತ್ತದೆ- ಸಂಬಂಧ ವೃದ್ದಿ ಆಗುವುದು. ಹೊಸದಾಗಿ ಕೆಲಸ ಬದಲಾವಣೆ ಆಗಬಹುದು. ಆದರೆ ಸಾಡೇ ಸಾತ್ ಶನಿಯ ಆರಂಭ ಹಂತ ಇದಾಗಿರುವುದರಿಂದ ಹೊಸ ಯೋಜನೆಗಳು, ದೊಡ್ಡ ಮೊತ್ತದ ಹಣ ಹಾಕಿ ಮಾಡುವ ವ್ಯಾಪಾರ- ವ್ಯವಹಾರಗಳನ್ನು ಮಾಡಬೇಡಿ. ಅಕ್ಟೋಬರ್ ತನಕ ರಾಹು ದ್ವಿತೀಯದಲ್ಲಿ ಇದ್ದು, ಹಗಲುಗನಸು ಕಾಣಬೇಡಿ. ಎಂಟನೇ ಮನೆಯಲ್ಲಿನ ಕೇತುವಿನಿಂದಾಗಿ ಗುಪ್ತ ರೋಗಗಳು, ಚರ್ಮಕ್ಕೆ ಸಂಬಂಧಿಸಿದ ಸಮಸ್ಯೆ ಉಂಟುಮಾಡಬಹುದು. ಅಕ್ಟೋಬರ್ ನಂತರ ನಿಮ್ಮ ಆಪ್ತರು ದೂರ ಆಗಬಹುದು. ಸಂಸಾರದಲ್ಲಿ ಕಲಹ ಇದೆ.
ಕಾಮೆಂಟ್ಗಳು
ಕಾಮೆಂಟ್ ಪೋಸ್ಟ್ ಮಾಡಿ